ಬಲರಾಜ್‌ ಸಾಹ್ನಿ ಯು (ಪಂಜಾಬಿ:ਬਲਰਾਜ ਸਾਹਨੀ ಹಿಂದಿ: बलराज साहनी) (1 ಮೇ 1913–13 ಏಪ್ರಿಲ್‌‌ 1973) ಓರ್ವ ಪ್ರಸಿದ್ಧ ಹಿಂದಿ ಚಲನಚಿತ್ರ ನಟನಾಗಿದ್ದ. ಯುಧಿಷ್ಠಿರ್‌‌‌ ಸಾಹ್ನಿ (ಹಿಂದಿ: युधिष्ठिर साहनी) ಎಂಬುದು ಅವನ ನಿಜವಾದ ಹೆಸರಾಗಿತ್ತು. ಈಗ ಪಾಕಿಸ್ತಾನದ ಪಂಜಾಬ್‌‌‌‌ನಲ್ಲಿರುವ ಭೇರಾ ಎಂಬ ಪ್ರದೇಶದ ಒಂದು ಪಂಜಾಬಿ ಖತ್ರಿ ಕುಟುಂಬಕ್ಕೆ ಅವನು ಸೇರಿದವನಾಗಿದ್ದ. ಆತ ಪ್ರಖ್ಯಾತ ಹಿಂದಿ ಬರಹಗಾರ, ನಾಟಕಕಾರ, ಮತ್ತು ನಟ ಭೀಷಮ್‌‌ ಸಾಹ್ನಿಯ ಸೋದರನಾಗಿದ್ದ. == ಆರಂಭಿಕ ಜೀವನ == ಅಧ್ಯಯನವನ್ನು ನಡೆಸಲೆಂದು ಸಾಹ್ನಿ ತನ್ನ ಸ್ವಂತ ಊರಾದ ರಾವಲ್ಪಿಂಡಿಯಿಂದ ಹಾರ್ವರ್ಡ್‌‌‌ಗೆ ತೆರಳಿದ. ಲಾಹೋರ್‌‌ನಲ್ಲಿ ಆತ ಇಂಗ್ಲಿಷ್‌ ಸಾಹಿತ್ಯದಲ್ಲಿ ತನ್ನ ಸ್ನಾತಕೋತ್ತರ‌ ಪದವಿಯನ್ನು ಸಂಪೂರ್ಣಗೊಳಿಸಿದ ಮತ್ತು ನಂತರದಲ್ಲಿ ರಾವಲ್ಪಿಂಡಿಗೆ ಹಿಂದಿರುಗಿ ತನ್ನ ಕುಟುಂಬದ ವ್ಯವಹಾರಲ್ಲಿ ಕೈಜೋಡಿಸಿದ. ಹಿಂದಿಯಲ್ಲಿ ಒಂದು ಸ್ನಾತಕ ಪದವಿಯನ್ನೂ ಗಳಿಸಿದ ಆತ, ಇದಾದ ನಂತರ ಪಂಜಾಬ್‌‌ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಒಂದು ಸ್ನಾತಕೋತ್ತರ‌ ಪದವಿಯನ್ನೂ ಪಡೆದ. ಇದಾದ ಕೆಲ ದಿನಗಳಲ್ಲೇ ಆತ ದಮಯಂತಿ ಸಾಹ್ನಿಯನ್ನು ಮದುವೆಯಾದ. ಬಂಗಾಳದಲ್ಲಿನ ಶಾಂತಿನಿಕೇತನದಲ್ಲಿರುವ ಟ್ಯಾಗೋರ್‌‌‌‌‌‌‌ರವರ ವಿಶ್ವ-ಭಾರತಿ ವಿಶ್ವವಿದ್ಯಾಲಯದಲ್ಲಿ ಓರ್ವ ಇಂಗ್ಲಿಷ್‌ ಮತ್ತು ಹಿಂದಿ ಶಿಕ್ಷಕನಾಗಿ ಸೇರಿಕೊಳ್ಳಲೆಂದು, 1930ರ ದಶಕದ ಅಂತ್ಯದ ವೇಳೆಗೆ ಸಾಹ್ನಿ ತನ್ನ ಹೆಂಡತಿಯೊಂದಿಗೆ ರಾವಲ್ಪಿಂಡಿಯನ್ನು ಬಿಟ್ಟು ತೆರಳಿದ. ಅಲ್ಲಿ ಅವರ ಮಗ ಪರೀಕ್ಷಿತ್‌‌ ಸಾಹ್ನಿಯ ಜನನವಾಯಿತು; ಈ ಅವಧಿಯಲ್ಲಿ ಅವನ ಹೆಂಡತಿ ದಮಯಂತಿ ತನ್ನ ಸ್ನಾತಕ ಪದವಿಯನ್ನು ಮಾಡುತ್ತಿದ್ದಳು. 1938ರಲ್ಲಿ, ಒಂದು ವರ್ಷದ ಅವಧಿಯವರೆಗೆ ಮಹಾತ್ಮ ಗಾಂಧಿಯವರೊಂದಿಗೆ ಕೆಲಸ ಮಾಡಲೂ ಸಹ ಆತ ತನ್ನನ್ನು ತೊಡಗಿಸಿಕೊಂಡ. ಅದರ ಮರುವರ್ಷದಲ್ಲಿ, ಗಾಂಧೀಜಿಯವರ ಆಶೀರ್ವಾದಗಳೊಂದಿಗೆ ಸಾಹ್ನಿ ಇಂಗ್ಲಂಡ್‌‌‌ಗೆ ತೆರಳಿ, -ಲಂಡನ್‌‌ನ ಹಿಂದಿ ಪ್ರಸಾರ ಸೇವೆಯಲ್ಲಿ ಓರ್ವ ರೇಡಿಯೋ ಉದ್ಘೋಷಕನಾಗಿ ಸೇರಿಕೊಂಡ. 1943ರಲ್ಲಿ ಆತ ಭಾರತಕ್ಕೆ ಹಿಂದಿರುಗಿದ. == ವೃತ್ತಿಜೀವನ == ಅಭಿನಯದಲ್ಲಿ ಯಾವಾಗಲೂ ಆಸಕ್ತನಾಗಿದ್ದ ಸಾಹ್ನಿಯು ಇಂಡಿಯನ್‌ ಪೀಪಲ್‌‌'ಸ್‌ ಥಿಯೇಟರ್‌ ಅಸೋಸಿಯೇಷನ್‌‌‌‌‌‌‌ನ () ನಾಟಕಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ತನ್ನ ಅಭಿನಯ ವೃತ್ತಿಜೀವನವನ್ನು ಆರಂಭಿಸಿದ. ಇನ್ಸಾಫ್‌‌ (1946) ಚಲನಚಿತ್ರದೊಂದಿಗೆ ಆತ ಮುಂಬಯಿಯಲ್ಲಿ ತನ್ನ ಚಲನಚಿತ್ರ ವೃತ್ತಿಜೀವನವನ್ನು ಆರಂಭಿಸಿದ; ಇದಾದ ನಂತರ 1946ರಲ್ಲಿ ಅಬ್ಬಾಸ್‌‌ ನಿರ್ದೇಶಿಸಿದ ಧರ್ತಿ ಕೆ ಲಾಲ್‌‌ ಚಿತ್ರ, ಮತ್ತು ಇತರ ಚಲನಚಿತ್ರಗಳಲ್ಲಿ ಅವನಿಗೆ ಅವಕಾಶಗಳು ದೊರೆತವು. ಆದರೆ, 1953ರಲ್ಲಿ ಬಂದ ಬಿಮಲ್‌ ರಾಯ್‌‌‌‌‌‌‌ನ ಶ್ರೇಷ್ಠ ಚಿತ್ರವಾದ ದೋ ಬೀಘಾ ಝಮೀನ್‌‌‌‌ ನಲ್ಲಿ ಓರ್ವ ನಟನಾಗಿ ಅವನ ನಿಜವಾದ ಸಾಮರ್ಥ್ಯವು ಮೊದಲು ಗುರುತಿಸಲ್ಪಟ್ಟಿತು. ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಈ ಚಲನಚಿತ್ರವು ಅಂತರರಾಷ್ಟ್ರೀಯ ಬಹುಮಾನವನ್ನು ಗೆದ್ದುಕೊಂಡಿತು. ಟ್ಯಾಗೋರ್‌‌‌‌ ರವರಿಂದ ಸೃಷ್ಟಿಸಲ್ಪಟ್ಟಿದ್ದು 1961ರಲ್ಲಿ ಬಂದ ಶ್ರೇಷ್ಠ ಚಿತ್ರವಾದ ಕಾಬೂಲಿವಾಲಾ ದಲ್ಲಿ ಆತ ತನ್ನ ಯಶಸ್ಸಿನ ಪರಂಪರೆಯನ್ನು ಪುನರಾವರ್ತಿಸಿದ. ಸಾಹ್ನಿಯ ಹೆಂಡತಿ ದಮಯಂತಿ ತೀರಾ ಕಿರಿಯ ವಯಸ್ಸಿನಲ್ಲಿ 1947ರಲ್ಲಿ ತೀರಿಕೊಂಡಳು; ಈಕೆ ಗುಡಿಯಾ (1947) ಎಂಬ ಅವನ ಚಲನಚಿತ್ರದಲ್ಲಿ ನಾಯಕಿಯ ಪಾತ್ರವನ್ನು ವಹಿಸಿದ್ದಳು. ಎರಡು ವರ್ಷಗಳ ನಂತರ ತನ್ನ ಸೋದರತ್ತೆಯ ಮಗಳಾದ ಸಂತೋಷ್‌ ಚಾಂದೋಕ್‌ಳನ್ನು ಆತ ಮದುವೆಯಾದ; ನಂತರದ ದಿನಗಳಲ್ಲಿ ಈಕೆ ಓರ್ವ ಲೇಖಕಿ ಮತ್ತು ದೂರದರ್ಶನ ಬರಹಗಾರ್ತಿಯಾಗಿ ಹೆಸರು ಪಡೆದಳು. ಸಾಹ್ನಿಯು ನಟಿಸಿದ ಎಲ್ಲಾ ಚಲನಚಿತ್ರಗಳಲ್ಲಿನ ಅವನ ಅಭಿನಯವು ಎಲ್ಲರಿಗೂ ಇಷ್ಟವಾಗಿ ಮೆಚ್ಚುಗೆಗೆ ಪಾತ್ರವಾದವು. ಸೀಮಾ (1955), ಸೋನೆ ಕಿ ಚಿಡಿಯಾ (1958), ಸಟ್ಟಾ ಬಜಾರ್‌‌ (1959), ಭಾಭಿ ಕಿ ಚೂಡಿಯಾ (1961), ಕಟ್‌ಪುತ್ಲಿ (1957), ಲಾಜ್‌ವಂತಿ (1958) ಮತ್ತು ಘರ್‌ ಸನ್ಸಾರ್‌‌ (1958) ಇವೇ ಮೊದಲಾದ ಚಿತ್ರಗಳಲ್ಲಿ ಆತ ನೂತನ್‌, ಮೀನಾ ಕುಮಾರಿ, ವೈಜಯಂತಿಮಾಲಾ, ಮತ್ತು ನರ್ಗಿಸ್‌ ಮೊದಲಾದ ಅಗ್ರಗಣ್ಯ ನಾಯಕಿಯರಿಗೆ ಎದುರಾಗಿ ಅವನು ನಟಿಸಿದ. ಆದಾಗ್ಯೂ, ವಕ್ತ್‌‌‌ (1965) ಚಲನಚಿತ್ರದಲ್ಲಿ ಅವನ ಮೇಲೆ ಚಿತ್ರಿಸಲಾದ ಏ ಮೆರೀ ಝೊಹ್ರ ಜಬೀನ್‌‌ ಎಂಬ ಪ್ರಸಿದ್ಧ ಗೀತೆಯ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವನನ್ನು ಪ್ರಾಯಶಃ ಇಂದಿನ ಪೀಳಿಗೆಯವರು ಅತ್ಯುತ್ತಮವಾದ ರೀತಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಸದರಿ ಗೀತೆಯಲ್ಲಿ ಅಚಲಾ ಸಚ್‌‌ದೇವ್‌‌‌‌ಗೆ ಎದುರಾಗಿ ಸಾಹ್ನಿಯು ಕಾಣಿಸಿಕೊಂಡಿದ್ದ. ನಾನಕ್‌ ದುಖಿಯಾ ಸಬ್‌ ಸನ್ಸಾರ್‌‌ (1970) ಎಂಬ ಶ್ರೇಷ್ಠ ಪಂಜಾಬಿ ಚಲನಚಿತ್ರದಲ್ಲಷ್ಟೇ ಅಲ್ಲದೇ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಟ್ಲುಜ್‌ ಕೆ ಕಾಂದೆ ಎಂಬ ಚಿತ್ರದಲ್ಲಿಯೂ ಅವನು ನಟಿಸಿದ್ದ. ಗರಮ್‌ ಹವಾ ಎಂಬ ಅವನ ಕೊನೆಯ ಚಲನಚಿತ್ರದಲ್ಲಿನ ಅವನ ಅಭಿನಯವು ಅವನ ಚಿತ್ರಜೀವನದ ಅತ್ಯುತ್ತಮ ಪಾತ್ರನಿರ್ವಹಣೆ ಎಂಬುದಾಗಿ ವಿಮರ್ಶಕರಿಂದ ಅನೇಕವೇಳೆ ಉಲ್ಲೇಖಿಸಲ್ಪಟ್ಟಿದೆ; ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸುವ ಓರ್ವ ತಲ್ಲಣದಿಂದೊಡಗೂಡಿದ, ಆದರೆ ಸಂಯಮದ ಸ್ವಭಾವವನ್ನು ಹೊಂದಿದ ಮುಸ್ಲಿಮ್‌‌ ವ್ಯಕ್ತಿಯಾಗಿ ಸಾಹ್ನಿ ಈ ಚಿತ್ರದಲ್ಲಿ ನಟಿಸಿದ್ದ. ಆದಾಗ್ಯೂ, ತನ್ನದೇ ಪಾತ್ರನಿರ್ವಹಣೆಗೆ ಶ್ರೇಯಾಂಕವನ್ನು ನೀಡಿಕೊಳ್ಳಲು, ಸಂಪೂರ್ಣಗೊಂಡ ಚಲನಚಿತ್ರವನ್ನು ಬಲರಾಜ್‌ ನೋಡಲು ಆಗಲೇ ಇಲ್ಲ; ಗರಮ್‌ ಹವಾ ಚಿತ್ರದ ತನ್ನ ಪಾಲಿನ ಮಾತಿನ ಲೇಪನವನ್ನು (ಡಬ್ಬಿಂಗ್‌‌) ಮುಗಿಸಿದ ಮರುದಿನವೇ ಆತ ಅಸುನೀಗಿದ್ದು ಇದಕ್ಕೆ ಕಾರಣವಾಯಿತು. ಚಲನಚಿತ್ರಕ್ಕಾಗಿ ಅವನು ಧ್ವನಿಮುದ್ರಿಸಿದ ಕೊನೆಯ ಸಾಲುಗಳು, ಹಾಗೂ ತನ್ಮೂಲಕವಾಗಿ ಅವನ ಕೊನೆಯ ಧ್ವನಿಮುದ್ರಿತ ಮಾತುಗಳು ಎಂದು ಕರೆಸಿಕೊಮಡ ಸಾಲುಗಳು ಹಿಂದಿಯಲ್ಲಿ ಹೀಗಿವೆ:- "ಕೋಯೀ ಇನ್‌ಸಾನ್‌ ಅಕೇಲೆ ಕಿತ್‌ನಾ ಜೀ ಸಕ್ತಾ ಹೈ?" ಇದನ್ನು ಕನ್ನಡದಲ್ಲಿ ಹಾಗೂ ಇಂಗ್ಲಿಷ್‌‌‌‌ನಲ್ಲಿ ಅನುಕ್ರಮವಾಗಿ ಹೀಗೆ ಅನುವಾದಿಸಬಹುದು:- "ಓರ್ವ ಮನುಷ್ಯ ಏಕಾಂಗಿಯಾಗಿ ಎಲ್ಲಿಯವರೆಗೆ ಜೀವಿಸಲು ಸಾಧ್ಯ?" (ಹೌ ಲಾಂಗ್‌ ಕೆನ್‌ ಎ ಮ್ಯಾನ್‌ ಲಿವ್‌ ಅಲೋನ್‌?" == ನಂತರದ ಜೀವನ == ಓರ್ವ ಸಹಜ ಪ್ರತಿಭೆಯುಳ್ಳ ಬರಹಗಾರನಾಗಿದ್ದ ಸಾಹ್ನಿಯ ಆರಂಭಿಕ ಬರಹಗಳು ಇಂಗ್ಲಿಷ್‌ನಲ್ಲಿದ್ದವಾದರೂ, ನಂತರದ ಜೀವನದಲ್ಲಿ ಅವನು ಪಂಜಾಬಿ ಪ್ರಕಾರಕ್ಕೆ ತನ್ನನ್ನು ಬದಲಾಯಿಸಿಕೊಂಡ ಮತ್ತು ಪಂಜಾಬಿ ಸಾಹಿತ್ಯದಲ್ಲಿನ ಓರ್ವ ಪ್ರಸಿದ್ಧ ಬರಹಗಾರ ಎನಿಸಿಕೊಂಡ. 1960ರಲ್ಲಿ, ಪಾಕಿಸ್ತಾನಕ್ಕೆ ಒಮ್ಮೆ ಭೇಟಿ ನೀಡಿದ ನಂತರ, ಮೇರಾ ಪಾಕಿಸ್ತಾನೀ ಸಫರ್‌‌ ಎಂಬ ಕೃತಿಯನ್ನು ಅವನು ರಚಿಸಿದ. 1969ರಲ್ಲಿ, ಮುಂಚಿನ ಸೋವಿಯೆಟ್‌ ಒಕ್ಕೂಟದ ಒಂದು ಪ್ರವಾಸವನ್ನು ಕೈಗೊಂಡ ನಂತರ ಅವನು ಬರೆದ ಮೇರಾ ರೂಸೀ ಸಫರ್‌‌ನಾಮಾ ಎಂಬ ಪುಸ್ತಕವು ಅವನಿಗೆ 'ಸೋವಿಯೆಟ್‌ ಲ್ಯಾಂಡ್‌ ನೆಹರೂ ಪ್ರಶಸ್ತಿ'ಯನ್ನು ಗಳಿಸಿಕೊಟ್ಟಿತು. ನಿಯತಕಾಲಿಕಗಳಿಗೆ ಆತ ಅನೇಕ ಕವಿತೆಗಳು ಮತ್ತು ಸಣ್ಣ ಕಥೆಗಳ ಕೊಡುಗೆಯನ್ನು ನೀಡಿದ್ದಷ್ಟೇ ಅಲ್ಲದೇ, ಮೇರೀ ಫಿಲ್ಮೀ ಆತ್ಮಕಥಾ ಎಂಬ ಶೀರ್ಷಿಕೆಯನ್ನು ಹೊಂದಿದ ತನ್ನ ಆತ್ಮಚರಿತ್ರೆಯನ್ನೂ ಬರೆದ. ಸಾಹ್ನಿ ಓರ್ವ ಅತೀವವಾಗಿ ಸುಶಿಕ್ಷಿತನಾದ ಮತ್ತು ರಾಜಕೀಯ ಪ್ರಜ್ಞೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದ. (ಇಂಡಿಯನ್‌ ಪೀಪಲ್‌‌'ಸ್‌ ಥಿಯೇಟರ್‌ ಅಸೋಸಿಯೇಷನ್‌‌) ಎಂಬ ಆಂದೋಲನದ ಸಂಸ್ಥಾಪಕ ಜನಕರ ಪೈಕಿ ಅವನು ಒಬ್ಬನಾಗಿದ್ದ ಮತ್ತು ತನ್ನ ವಾಮಪಂಥೀಯ ಒಲವುಗಳಿಂದಾಗಿ ಚಿರಪರಿಚಿತನಾಗಿದ್ದ. ಬೆಳ್ಳಿತೆರೆಯ ಬರಹಗಾರಿಕೆಯಲ್ಲಿಯೂ ಸಾಹ್ನಿ ಕೈ ಆಡಿಸಿದ; 1951ರಲ್ಲಿ ಬಂದ ಬಾಜಿ ಎಂಬ ಚಲನಚಿತ್ರಕ್ಕೆ ಅವನು ಕಥೆಯನ್ನು ಬರೆದ. ದೇವ್‌ ಆನಂದ್‌‌ ನಟಿಸಿದ್ದ ಈ ಚಿತ್ರವನ್ನು ಗುರುದತ್‌‌ ನಿರ್ದೇಶಿಸಿದ. ಪದ್ಮಶ್ರೀ ಪ್ರಶಸ್ತಿಯ (1969) ಓರ್ವ ವಿಜೇತನೆಂಬ ಕೀರ್ತಿಯೂ ಅವನಿಗೆ ದಕ್ಕಿದೆ. ಪಂಜಾಬಿ ಭಾಷೆಯಲ್ಲಿಯೂ ಸಾಹಿತ್ಯ ರಚಿಸಿದ ಬಲರಾಜ್‌ ಸಾಹ್ನಿ, ಪ್ರೀತ್‌‌ಲಾರಿ ಎಂಬ ಪಂಜಾಬಿ ನಿಯತಕಾಲಿಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ. ಸಾಹ್ನಿಯು ನಿಸ್ಸಂದೇಹವಾಗಿ ಭಾರತೀಯ ಚಿತ್ರರಂಗವು ಹಿಂದೆಂದೂ ಕಂಡಿರದ ಮಹೋನ್ನತ ನಟರ ಪೈಕಿ ಒಬ್ಬನಾಗಿದ್ದ: ಮೋತಿಲಾಲ್‌‌‌‌ರಂಥ ನಟರ ನೆನಪನ್ನು ಪ್ರೇಕ್ಷಕರ ಮನೋಭಿತ್ತಿಯಲ್ಲಿ ಉಳಿಸಿದ ಓರ್ವ ಅತೀವ ಸಹಜ ನಟನಾಗಿದ್ದ ಅವನಿಗೆ, ತನ್ನ ಸರಳ ವ್ಯಕ್ತಿತ್ವ ಮತ್ತು ಅಭಿನಯದ ಸುಸಂಸ್ಕೃತ ಶೈಲಿಯಿಂದಾಗಿ ಈ ಸಾಧನೆಯನ್ನು ಮೆರೆಯಲು ಸಾಧ್ಯವಾಯಿತೆನ್ನಬಹುದು. ಅವನು ಯಾವುದೇ ಹಗರಣದಲ್ಲಿ ಎಂದಿಗೂ ಪಾಲ್ಗೊಳ್ಳದಿದ್ದ ಕಾರಣದಿಂದಾಗಿ, ಅವನನ್ನು ಓರ್ವ ಆದರ್ಶ ವ್ಯಕ್ತಿಯಾಗಿ ಪರಿಗಣಿಸಲಾಗಿತ್ತು. ದೋ ಬೀಘಾ ಝಮೀನ್‌‌ ಮತ್ತು ಗರಮ್‌ ಹವಾ ಚಿತ್ರಗಳಲ್ಲಿನ ಅವನ ಅಭಿನಯವು, ಅವನ ವೃತ್ತಿಜೀವನದ ಗಮನ ಸೆಳೆಯುವ ಘಟ್ಟಗಳಾಗಿದ್ದವು. ನವ-ಯಥಾರ್ಥ ದೃಷ್ಟಿಯ ಚಲನಚಿತ್ರ ಎಂದು ಕರೆಯಲ್ಪಡುವ ಪರಿಕಲ್ಪನೆಯಲ್ಲಿ ಅವನು ನಂಬಿಕೆಯನ್ನು ಇಟ್ಟಿದ್ದ. ಬಲರಾಜ್‌ನ ಸೋದರನಾದ ಭೀಷಮ್‌‌ ಸಾಹ್ನಿಯು ಓರ್ವ ಸುಪರಿಚಿತ ಬರಹಗಾರನಾಗಿದ್ದು, ತಮಸ್‌‌‌‌ ಎಂಬ ಪುಸ್ತಕವನ್ನು ಆತ ಬರೆದ. ಅವನ ಮಗನಾದ ಪರೀಕ್ಷಿತ್‌‌ ಸಾಹ್ನಿ ಕೂಡಾ ಓರ್ವ ನಟನಾಗಿದ್ದಾನೆ. 1973ರ ಏಪ್ರಿಲ್‌ 13ರಂದು, ತನ್ನ 59ನೇ ವಯಸ್ಸಿನಲ್ಲಿ ಒಂದು ಮಿತಿಮೀರಿದ ಹೃದಯ ಸ್ತಂಭನದಿಂದಾಗಿ ಬಲರಾಜ್‌ ಸಾಹ್ನಿ ತೀರಿಕೊಂಡ. ಶಬ್ನಮ್ ಎಂಬ ತನ್ನ ಕಿರಿಯ ಮಗಳ ಅಕಾಲಿಕ ಸಾವಿನಿಂದಾಗಿ ಕೆಲಕಾಲದವರೆಗೆ ಆತ ಖಿನ್ನತೆಗೊಳಗಾಗಿದ್ದ. 1973ರಲ್ಲಿ ಬಲರಾಜ್‌ ಸಾಹ್ನಿಯಿಂದ ಮುಂಬಯಿಯಲ್ಲಿ ಸಂಸ್ಥಾಪಿಸಲ್ಪಟ್ಟ 'ಪಂಜಾಬಿ ಕಲಾ ಕೇಂದರ್‌‌‌‌' ಎಂಬ ಸಂಸ್ಥೆಯು ವಾರ್ಷಿಕವಾಗಿ 'ಬಲರಾಜ್‌ ಸಾಹ್ನಿ ಪ್ರಶಸ್ತಿ' ಯನ್ನು ನೀಡುತ್ತದೆ; ಇಷ್ಟೇ ಅಲ್ಲ 'ಅಖಿಲಭಾರತ ಕಲಾವಿದರ ಸಂಘ'ವನ್ನು (ಆಲ್‌ ಇಂಡಿಯಾ ಆರ್ಟಿಸ್ಟ್ಸ್‌ ಅಸೋಸಿಯೇಷನ್‌) ಸ್ಥಾಪಿಸಿದ ಕೀರ್ತಿಯೂ ಅವನಿಗೆ ಸಲ್ಲುತ್ತದೆ. == ಚಲನಚಿತ್ರಗಳ ಪಟ್ಟಿ == == ಕೃತಿಗಳು == ಬಲರಾಜ್‌ ಸಾಹ್ನಿ ಬರೆದಿರುವ ಬಲರಾಜ್‌ ಸಾಹ್ನಿ: ಆನ್‌ ಆಟೋಬಯಾಗ್ರಫಿ . ಹಿಂದ್‌ ಪಾಕೆಟ್‌ ಬುಕ್ಸ್‌‌ನಿಂದ ಪ್ರಕಟಿತ, 1979. == ಹೆಚ್ಚಿನ ಓದಿಗಾಗಿ == ಪೂರಣ್‌ ಚಂದ್ರ ಜೋಷಿ ಬರೆದಿರುವ ಬಲರಾಜ್‌ ಸಾಹ್ನಿ: ಆನ್‌ ಇಂಟಿಮೇಟ್‌ ಪೋಟ್ರೇಟ್‌ . ವಿಕಾಸ್‌ ಪಬ್ಲಿಷಿಂಗ್‌ ಹೌಸ್‌‌ನಿಂದ ಪ್ರಕಟಿತ, 1974. ಭೀಷ್ಮ ಸಾಹ್ನಿ ಬರೆದಿರುವ ಬಲರಾಜ್‌, ಮೈ ಬ್ರದರ್‌‌ (ನ್ಯಾಷನಲ್‌ ಬಯಾಗ್ರಫಿ ಸರಣಿ) . ನ್ಯಾಷನಲ್‌ ಬುಕ್‌‌ ಟ್ರಸ್ಟ್‌‌, ಭಾರತ, 1981. == ಉಲ್ಲೇಖಗಳು == ಬಲರಾಜ್‌ ಸಹಾನಿಯ ಆತ್ಮಚರಿತ್ರೆ == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ [೧] 2018-07-10 ವೇಬ್ಯಾಕ್ ಮೆಷಿನ್ ನಲ್ಲಿ. ಜವಹರಲಾಲ್‌‌ ನೆಹರು ವಿಶ್ವವಿದ್ಯಾಲಯದಲ್ಲಿ 1972ರಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿನ ಬಲರಾಜ್‌ ಸಾಹ್ನಿಯ ಭಾಷಣ